*ಪರಿಹಾರವೇ ಇಲ್ಲದ ಸಮಸ್ಯೆ
ಒಮ್ಮೆ ಕಾಡಿನಲ್ಲಿ ಹುಲಿಗೆ ತೀವ್ರ ಗಾಯವಾಗಿತ್ತಂತೆ. ಕಾಡಿನ ಹುಲಿಗೆ ಔಷಧ ನೀಡುವವರು ಯಾರು? ಹುಲಿಗೆ ಹುಲಿಯೇ ವೈದ್ಯ. ತನ್ನ ಗಾಯವನ್ನು ಮುಚ್ಚಲು ಅದು ತನ್ನದೇ ಶರೀರದ ಇನ್ನೊಂದು ಕಡೆಯ ಚರ್ಮವನ್ನು ಕಿತ್ತು ಮೆತ್ತಿತು. ಹಳೆಯ ಗಾಯ ವಾಸಿಯಾಯಿತು. ಹೊಸ ಗಾಯ ಕೊಳೆಯತೊಡಗಿತು. ಮತ್ತೆ ಇನ್ನೊಂದು ಕಡೆಯ ಚರ್ಮ ಕಿತ್ತು ಅಲ್ಲಿ ತೇಪೆ ಹಾಕಿತು. ಹೀಗೆ ಹುಲಿಯ ದೇಹದಲ್ಲಿ ಗಾಯ ವಾಸಿಯಾಗಲೇ ಇಲ್ಲ. ಜಾಗ ಮಾತ್ರ ಬೇರೆಯಾಗುತ್ತ ಹೋಯಿತು.
ಸಮಸ್ಯೆಯ ಸುಳಿಯಲ್ಲಿ ಸಿಕ್ಕ ಮನುಷ್ಯನೂ ಹೀಗೆಯೇ. ಒಂದನ್ನು ಬಗೆಹರಿಸಲು ಹೋಗಿ ಇನ್ನೊಂದರಲ್ಲಿ ಬೀಳುತ್ತಾನೆ.
ಸಾಲ ಮಾಡಿದ ರೈತನ ಸ್ಥಿತಿಯೂ ಹೀಗೆಯೇ. ಒಂದು ಕಡೆ ಸಾಲ ಮಾಡುತ್ತಾನೆ. ಅದನ್ನು ತೀರಿಸಲು ಇನ್ನೊಂದು ಕಡೆ ಸಾಲ. ಇದನ್ನು ತೀರಿಸಲು ಮಗದೊಂದು ಕಡೆ ಸಾಲ. ಹೀಗೆ ಸಾಲದ ವಿಷ ವರ್ತುಲ ಸುತ್ತುತ್ತಲೇ ಇರುತ್ತದೆ. ಅದು ಮುಗಿಯುವುದು ಸಾಲ ಮಾಡಿದವನ ಸಾವಿನಲ್ಲಿ ಮಾತ್ರ. ಇಂಥ ಸನ್ನಿಗೆ ಸಿಕ್ಕಾಗಲೇ ಸಾಲಗಾರ ಆತ್ಮಹತ್ಯೆಯ ಹಾದಿ ತುಳಿಯುತ್ತಾನೆ. ಇಂಥವರ ಸ್ಥಿತಿ ಕಂಡೇ ಹುಲಿಗಾಯ ಆಗಿದೆ ಅವನಿಗೆ ಎಂದು ಹೇಳುತ್ತಾರೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.