*ದೈವಕ್ಕೆ ರಕ್ಷಣೆಯ ಹೊಣೆ ಒಪ್ಪಿಸುವುದು
ನಾನು ಅವನಿಗೆ ಸೊಪ್ಪು ಹಾಕುವುದಿಲ್ಲ ಎಂದು ಯಾರೋ ಹೇಳಿದ್ದನ್ನು ನೀವು ಕೇಳಿಸಿಕೊಂಡಿರಬಹುದು. ಆತನ ಮಾತಿನ ಭಾವಾರ್ಥವೂ ನಿಮಗೆ ವೇದ್ಯವಾಗಿರಬಹುದು. ಅವನಿಗೆ ನಾನು ಯಾವುದೇ ಗೌರವ ಕೊಡುವುದಿಲ್ಲ. ಅವನ ಮಾತು ನಾನು ಕೇಳುವುದಿಲ್ಲ. ಅವನ ಅಧೀನವಾಗಿ ನಾನು ಇರುವುದಿಲ್ಲ… ಹೀಗೆ ಅರ್ಥಪರಂಪರೆಯನ್ನು ಅದು ಹೇಳುತ್ತಿದೆ.
ಏನಿದು ಸೊಪ್ಪು ಹಾಕುವುದು? ಸೊಪ್ಪು ಹಾಕಿದರೆ ಗೌರವ ನೀಡಿದಂತೆ ಅಂತ ಇಲ್ಲಿ ಅರ್ಥ ಹೊರಡುತ್ತದೆ. ಸೊಪ್ಪು ಹಾಕದಿರುವುದು ಇದರ ವಿರುದ್ಧ ಅರ್ಥವನ್ನು ನೀಡುತ್ತದೆ.
ಊರ ಗಡಿಯಲ್ಲಿ ಒಂದು ಕಲ್ಲು ಇರುತ್ತದೆ. ಅದಕ್ಕೆ ಸೊಪ್ಪುರತಿ ಕಲ್ಲು ಎಂದು ಹೇಳುವುದನ್ನು ನಾನು ಕೇಳಿದ್ದೇನೆ. ಊರ ಗಡಿ ದಾಟಿ ಹೋಗುವಾಗ ಆ ಕಲ್ಲಿಗೆ ಸೊಪ್ಪಿನ ಒಂದು ಟೊಂಗೆಯನ್ನು ಎಸೆದು ಹೋಗುವ ರೂಢಿ ಇದೆ. ನಾನು ಬರುವವರೆಗೆ ನನ್ನ ಊರು ಮನೆಯನ್ನು ಕಾಯ್ದುಕೊಂಡಿರು ಎಂಬ ಬೇಡಿಕೆ ಇಟ್ಟು ಸೊಪ್ಪು ಹಾಕುತ್ತಾರೆ. ನಮ್ಮ ಭಾರವನ್ನು ದೈವದ ಕೈಗೆ ಒಪ್ಪಿಸಿ ನಾವು ನಿರುಮ್ಮಳವಾಗಿರುವುದು. ಇದು ಬರೀ ಕಲ್ಲಲ್ಲ. ಅದೊಂದು ದೈವ. ಹೂವು ಎಲ್ಲ ಕಾಲದಲ್ಲೂ ಸಿಗದ ಕಾರಣಕ್ಕೆ ಸೊಪ್ಪು ಹಾಕುವುದು ರೂಢಿಗೆ ಬಂದಿರಬಹುದು.
ನಾನು ಸೊಪ್ಪು ಹಾಕುವುದಿಲ್ಲ ಎಂದರೆ ಅದರಿಂದ ನನಗೆ ಯಾವುದೇ ರಕ್ಷಣೆ ಬೇಡ, ನನ್ನ ರಕ್ಷಣೆ ನಾನು ಮಾಡಿಕೊಳ್ಳಬಲ್ಲೆ ಎಂದು ಹೇಳಿದಂತೆ.
ಒಂದು ಚಿಕ್ಕ ಮಾತಿನಲ್ಲಿ ಒಂಂದು ಸಂಸ್ಕೃತಿಯೇ ಹರಳುಗೊಂಡಿದೆ ಇಲ್ಲಿ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಹಿರಿಯ ಸುದ್ದಿ ಸಂಪಾದಕ, ಸಂಪಾದಕ, ಮುದ್ರಕ ಮತ್ತು ಪ್ರಕಾಶಕನಾಗಿ 2020ರ ಡಿಸೆಂಬರ್ ಕೊನೆಯ ದಿನ ವೃತ್ತಿಯಿಂದ ನಿವೃತ್ತನಾದೆ. ಪತ್ನಿ, ಮಗ, ಸೊಸೆ, ಮಗಳು, ಅಳಿಯ ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.