*ಕಠಿಣವಾದ ಆದೇಶ

ಸುಗ್ರೀವಾಜ್ಞೆ ಎಂಬ ಪದವನ್ನು ಆಗಾಗ ಕೇಳುತ್ತಿರುತ್ತೇವೆ, ಓದುತ್ತಿರುತ್ತೇವೆ. ಯಾರಾದರೂ ಹೀಗೇ ಮಾಡು ಎಂದು ಕಟ್ಟುನಿಟ್ಟಾಗಿ ಹೇಳಿದರೆ, ನಿಂದೇನು ಸುಗ್ರೀವಾಜ್ಞೆನಾ ಎಂದು ಕೇಳುತ್ತಾರೆ. ಯಾವುದೋ ವಿಷಯದ ಕುರಿತು ಸರ್ಕಾರ ಸುಗ್ರೀವಾಜ್ಞೆಯನ್ನು ಹೊರಡಿಸಿದೆ ಎಂದು ಪತ್ರಿಕೆಯಲ್ಲಿ ಬಂದುದನ್ನು ಓದುತ್ತೇವೆ.
ಹಿಂದೆ ರಾಮಾಯಣದಲ್ಲಿ ಶ್ರೀರಾಮ ಸೀತೆಯನ್ನು ಕಳೆದುಕೊಂಡು ಆಕೆಯನ್ನು ಹುಡುಕುತ್ತ ಸುಗ್ರೀವನ ಸ್ನೇಹವನ್ನು ಸಂಪಾದಿಸುತ್ತಾನೆ. ವಾಲಿಯನ್ನು ಕೊಂದ ಶ್ರೀರಾಮನು ಸುಗ್ರೀವನಿಗೆ ಆತನ ಪತ್ನಿಯನ್ನು ಮರಳಿ ಕೊಡಿಸುತ್ತಾನೆ. ಸೀತೆಯನ್ನು ಹುಡುಕಿಕೊಡಬೇಕಾದ ಅನಿವಾರ್ಯತೆ ಈಗ ಸುಗ್ರೀವನ ಮೇಲೆ.
ಸುಗ್ರೀವನು ವಾನರರನ್ನೆಲ್ಲ ಕರೆದು ಸೀತೆಯನ್ನು ಒಂದು ತಿಂಗಳೊಳಗೆ ಹುಡುಕಿ ತರಬೇಕು. ಒಂದು ತಿಂಗಳ ಮೇಲೆ ಒಂದು ದಿನವಾದರೂ ಅವರಿಗೆ ಮರಣದಂಡನೆ ವಿಧಿಸಲಾಗುವುದು ಎಂದು ಆದೇಶ ನೀಡಿ ಅವರನ್ನೆಲ್ಲ ನಾಲ್ಕೂ ದಿಕ್ಕುಗಳಿಗೆ ನಾಲ್ಕು ತಂಡಗಳಲ್ಲಿ ಕಳುಹಿಸುತ್ತಾನೆ.
ಇಂಥ ಕಠಿಣವಾದ ಆದೇಶವನ್ನು ಸುಗ್ರೀವ ನೀಡಿದ್ದರಿಂದ ಅದು ಸುಗ್ರೀವಾಜ್ಞೆಯೆಂದು ಪ್ರಸಿದ್ಧವಾಯಿತು.
ಸಂಸತ್ತಿನಲ್ಲಿ ಅಥವಾ ವಿಧಾನ ಮಂಡಲದಲ್ಲಿ ಮಸೂದೆಯನ್ನು ಮಂಡಿಸದೆಯೇ ತುರ್ತಾಗಿ ಯಾವುದಾದರೂ ಆದೇಶವನ್ನು ಜಾರಿಗೆ ತರುವುದಿದ್ದರೆ ಅದನ್ನು ರಾಷ್ಟ್ರಪತಿಗಳ ಇಲ್ಲವೆ ರಾಜ್ಯಪಾಲರ ಸಹಿ ಪಡೆದು ಜಾರಿಗೆ ತರುತ್ತಾರೆ. ಇಂಥ ಆದೇಶಕ್ಕೆ ಸುಗ್ರೀವಾಜ್ಞೆ ಎಂದು ಕರೆಯುತ್ತಾರೆ. ಈ ಸುಗ್ರೀವಾಜ್ಞೆ ಆರು ತಿಂಗಳೊಳಗೆ ಶಾಸನಸಭೆಯ ಅನುಮತಿಯನ್ನು ಪಡೆಯಬೇಕು. ಇಲ್ಲದೆ ಹೋದರೆ ಅದು ತನ್ನಷ್ಟಕ್ಕೆ ಅನೂರ್ಜಿತಗೊಳ್ಳುತ್ತದೆ.