ಸಾವು ಸಾವಲ್ಲ ಗೆಳೆಯ
ಅದು ನಿನ್ನ ಮರುಹುಟ್ಟು
ಸತ್ತು ನೀ ಬಿಚ್ಚಿಟ್ಟ
ನೆನಪುಗಳ ಬುತ್ತಿ
ಕಣ್ಣೀರಲ್ಲಿ ಕಲಸಿ
ತುತ್ತು ಮಾಡಿ ಜೀವ ಹಿಡಿದಿದ್ದೇನೆ
ಗೆಳೆಯ ಅದು ನಿನ್ನ ಸಾವಲ್ಲ
ನಿಂತಲ್ಲಿ ನೀ ಬಂದು
ಕಥೆ ಹೇಳುವೆ
ಕುಂತಲ್ಲಿ ನೀ ಬಂದು
ಕುರುಳು ನೇವರಿಸುವೆ
ಮಲಗಿದರೆ ನೀ ಬಂದು
ಮುಸುಕೆಳೆದು ಕಚಗುಳಿ
ಇಡುವೆ ಗೆಳೆಯ ನಾ ಬದುಕಿಯೂ
ಕ್ಷಣ ಕ್ಷಣವೂ ಸಾಯುತ್ತಿರುವೆ
ಇದ್ದಾಗ ನೀ ಕಾಡಲಿಲ್ಲ ನನ್ನ
ನಾನೇ ನಿನ್ನ ಗೋಳುಗೆರೆದೆ
ನನ್ನ ನಗುವಿನಲ್ಲೇ ನೀ
ನಿನ್ನ ಹರುಷ ಕಂಡೆ
ನೀ ನಿನಗಾಗಿ ಬದುಕದೆ
ನನಗಾಗಿ ಬದುಕಿದೆ
ಈಗೇಕೆ ಬಾರದ ಲೋಕಕೆ ಹೋದೆ?
ಇದ್ದಾಗ ಏನೂ ಅನ್ನಿಸದ ನೀನು
ಹೋದಾಗ ಎಲ್ಲವೂ ಆದೆ
ಇನ್ನಾರ ಮುಂದೆ ಮುನಿವೆ ನಾ
ಇನ್ನಾರಿಗೆ ಶರಣೆಂಬೆ ನಾ
ಒಲಿವ ಒಲಿಸುವ
ಕಣ್ಣುಮುಚ್ಚಾಲೆಯಲ್ಲಿ
ಆಗ ಅಡಗುವ ಸರದಿ ನನ್ನದಾಗಿತ್ತು
ಈಗ ನಿನ್ನ ಸರದಿ
ನಿನ್ನ ನಾ ತಲುಪಲಾರೆ
ನಿನ್ನ ನಾ ಹುಡುಕಲಾರೆ
ನಾ ಸೋತೆ, ಶರಣು
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಹಿರಿಯ ಸುದ್ದಿ ಸಂಪಾದಕ, ಸಂಪಾದಕ, ಮುದ್ರಕ ಮತ್ತು ಪ್ರಕಾಶಕನಾಗಿ 2020ರ ಡಿಸೆಂಬರ್ ಕೊನೆಯ ದಿನ ವೃತ್ತಿಯಿಂದ ನಿವೃತ್ತನಾದೆ. ಪತ್ನಿ, ಮಗ, ಸೊಸೆ, ಮಗಳು, ಅಳಿಯ ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.