ಪತ್ರಿಕಾಲಯದಲ್ಲಿ
ಪತ್ರಗಳದ್ದೇ ರಾಶಿ ರಾಶಿ
ಬಿಡಿಸಿ ಇಡತೊಡಗಿದರೆ
ಸುದ್ದಿಗಳ ಗುಡ್ಡ
ಅಪಘಾತ, ಸಾವು, ಕೊಲೆ,
ಬೆದರಿಕೆ, ವರದಕ್ಷಿಣೆ ಕಿರುಕುಳ
ಗೋಲೀಬಾರು, ಲಾಠಿ ಛಾರ್ಜು, ನಿಷೇಧಾಜ್ಞೆ
ಬರೀ ಕ್ರಿಮಿನಲ್ಲು
ನೀರಿಲ್ಲ, ರಸ್ತೆಯಲ್ಲಿ ಹೊಂಡಗಳು
ಬೀದಿ ದೀಪದ ಕಂಬಕ್ಕೆ ಬಲ್ಬುಗಳೇ ಇಲ್ಲ
ಶಾಲೆಗೆ ಮಾಸ್ತರು ಇಲ್ಲ,
ಆಸ್ಪತ್ರೆಯಲ್ಲಿ ವೈದ್ಯರು ಇಲ್ಲ
ಇವೆಲ್ಲ ಇಲ್ಲಗಳ ಸಂತೆ
ರಸ್ತೆ ತಡೆ, ರೈಲು ತಡೆ, ಜೈಲ್ ಭರೋ
ಕಪ್ಪು ಬಾವುಟದ ಪ್ರದರ್ಶನ
ಆತ್ಮಾಹುತಿಗೆ ಯತ್ನ
ಆಮರಣ ಉಪವಾಸ
ಸರದಿ ಅನ್ನ ಸತ್ಯಾಗ್ರಹ
ತನಗಾಗಿ, ಅವರಿಗಾಗಿ, ಗೊತ್ತಿದ್ದು, ಗೊತ್ತಿಲ್ಲದೆಯೇ
ಕಟ್ಟುತ್ತೇವೆ, ನಿರ್ಮಿಸುತ್ತೇವೆ
ಮಂಜೂರು ಮಾಡುತ್ತೇವೆ
ಚುಕ್ಕಿ ಚಂದ್ರಮರ ತಂದು ಪಕ್ಕದಲ್ಲಿ ಇಡುತ್ತೇವೆ
ಅಂಗೈಯಲ್ಲಿ ಸ್ವರ್ಗ ತೋರಿಸುವ ರಾಜಕಾರಣಿಗಳು
ಸಂತಾಪ, ವಿಷಾದ, ಶ್ರದ್ಧಾಂಜಲಿ
ಕಣ್ಣೀರ ಕಥೆಗೆ ಭರವಸೆಯ ಕರ್ಚೀಪು
ನಡುವೆಯೇ ಹೇಳುತ್ತಾರೆ ಸಂಪಾದಕರು
ಹರಿದು ತಾ ಏಜೆನ್ಸಿ ಕಾಪಿ
ಒಂದು ಕೈಯಲ್ಲಿ ಪಿಟಿಐ
ಇನ್ನೊಂದು ಕೈಯಲ್ಲಿ ಯುಎನ್ಐ
ಕಣ್ಣಾಡಿಸುತ್ತ್ತ ಹೋಗುವರವರು
ಮುಗಿಯದ ಸುರುಳಿ ಅಕ್ಷಯಾಂಬರವು
ಭಿನ್ನಮತ, ಬೆಂಬಲದ ಹಿಂದೆಗೆತ
ಸರಕಾರ ಉರುಳಿಸುವ ಸಂಚು
ಮಿತ್ರ ಪಕ್ಷಗಳ ಚರ್ಚೆ
ಗಡಿಯಲ್ಲಿ ಚಕಮಕಿ, ಗುಂಡಿಗೆ
ಉಗ್ರಗಾಮಿಯು ಬಲಿ
ಪಕ್ಕದ ಫೋನು ಒದರುವುದು
ಎಲ್ಲಿಯೋ ಬೆಂಕಿ, ಕೋಮು ಗಲಭೆ
ಎಲ್ಲಿ ಫೋಟೋಗ್ರಾಫರು?
ಹತ್ತು ಸತ್ತರೆ ಎರಡೇ ಎನ್ನುವ ಪೊಲೀಸರು
ಬರೆಯುವವರು ಬರೆದರು
ಜೋಡಿಸುವವರು ಜೋಡಿಸಿದರು
ತಿದ್ದುವವರು ತಿದ್ದಿ ತೀಡಿದರು
ಮುಖಪುಟಕ್ಕೆ ಯಾವ ಸುದ್ದಿ?
ಒಳಪುಟಕ್ಕೆ ಏನೇನು?
ಯಾವುದು ಸಂಪಾದಕೀಯ
ಕೊನೆಯ ಪುಟದಲ್ಲಿ ಯಾರು ಕ್ಲೀನ್ ಬೌಲ್ಡು?
ಜೊಳ್ಳು ತೂರಿದರು, ಕಾಳು ಹೆಕ್ಕಿದರು
ಕೊಂಬು, ಕಾಮಾ, ವಾರ, ತಿಥಿ
ಎಲ್ಲವೂ ಸರಿ
ನವ ವಧುವಿಗೆ ಗಡಿಬಿಡಿಯ ಶೃಂಗಾರ
ನಸುಕಿನಲ್ಲಿ ಬಸ್ ಸ್ಟ್ಯಾಂಡ್
ಕಾಫಿ, ಟೀ ಕ್ಲಬ್
ಮನೆ ಮನೆಯಲ್ಲಿ, ಎಲ್ಲೆಂದರಲ್ಲಿ
ತಾಜಾ ವರ್ತಮಾನ
ನಭೂತೋ ನ ಭವಿಷ್ಯತಿ
ನಿಗಿ ನಿಗಿ ನಮ್ಮ ವರ್ತಮಾನ
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಹಿರಿಯ ಸುದ್ದಿ ಸಂಪಾದಕ, ಸಂಪಾದಕ, ಮುದ್ರಕ ಮತ್ತು ಪ್ರಕಾಶಕನಾಗಿ 2020ರ ಡಿಸೆಂಬರ್ ಕೊನೆಯ ದಿನ ವೃತ್ತಿಯಿಂದ ನಿವೃತ್ತನಾದೆ. ಪತ್ನಿ, ಮಗ, ಸೊಸೆ, ಮಗಳು, ಅಳಿಯ ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.