*ಅಸಾಂದರ್ಭಿಕವಾಗಿ ಪ್ರವರ ಹೇಳಿಕೊಳ್ಳುವವರು

ಟ ಆಯಿತೆ ಕೇಳಿದರೆ ಮುಂಡಾಸು ಮೂವತ್ತು ಮೊಳ ಅಂದ ಎಂಬ ಮಾತೊಂದಿದೆ. ಅಳಿಯನೊಬ್ಬ ಹೊಸದಾಗಿ ಮುಂಡಾಸವನ್ನು ಖರೀದಿಸಿದ್ದ. ಆ ಮುಂಡಾಸವನ್ನು ತೋರಿಸುವುದಕ್ಕಾಗಿಯೇ ಮಾವನ ಮನೆಗೆ ಹೋಗುತ್ತಾನೆ. ಚೆನ್ನಾಗಿ ನೆರಿಗೆಗಳನ್ನು ಮಾಡಿಕೊಂಡು ತಲೆಗೆ ಸುತ್ತಿಕೊಂಡಿದ್ದ. ಮಾವನ ಮನೆಯಲ್ಲಿ ಯಾರೂ ಅವನ ಮುಂಡಾಸದ ಬಗ್ಗೆ ಮಾತೇ ಆಡಲಿಲ್ಲ.
ಮಾವನು, ಮನೆಯಲ್ಲಿ ಎಲ್ಲರೂ ಕ್ಷೇಮವೆ ಎಂದಷ್ಟೇ ಕೇಳಿ ಸುಮ್ಮನಾದ. ಅತ್ತೆ ಬಂದವಳು ತನ್ನ ಮಗಳು, ಮೊಮ್ಮಕ್ಕಳು ಮೊದಲಾದವರ ಕುರಿತು ಕೇಳಿ ಸುಮ್ಮನಾದಳು. ಅಳಿಯನ ತಾಳ್ಮೆ ತಪ್ಪತೊಡಗಿತು. ತನ್ನ ಮುಂಡಾಸದ ಕುರಿತು ಹೇಳಬೇಕು ಎಂದು ಚಡಪಡಿಸತೊಡಗಿದ. ಹೊರಗೆ ಹೋಗಿದ್ದ ಅತ್ತೆ ಸ್ವಲ್ಪ ಹೊತ್ತಿನ ನಂತರ ಮನೆಗೆ ಬಂದವಳು ಅಳಿಯನನ್ನು ಕಂಡು, ಊಟ ಆಯಿತೆ ಎಂದು ಕೇಳಿದಳು. ತನ್ನ ಮುಂಡಾಸದ ಗುಂಗಿನಲ್ಲಿಯೇ ಇದ್ದ ಅಳಿಯ, ಮೂವತ್ತು ಮೊಳ ಅಂದ. ಏನು ಮೂವತ್ತು ಮೊಳ ಎಂದು ಅತ್ತೆ ಕೇಳಿದಳು. ಅದೇ ಈ ಮುಂಡಾಸ. ಮೊನ್ನೆ ಪೇಟೆಗೆ ಹೋಗಿದ್ದೆ. ಉದ್ದ ಮೂವತ್ತು ಮೊಳ ಇದೆ. ಅಗಲ ಆರು ಮೊಳ ಇದೆ. ರೇಷ್ಮೆಯ ಜರಿ ಇದೆ. ತುದಿಯಲ್ಲಿ ಕಸೂತಿ ಇದೆ ಎಂದೆಲ್ಲ ಹೇಳತೊಡಗಿದ.
ಅತ್ತೆಗೆ ಒಳಗೊಳಗೇ ನಗು. ಈ ಅಳಿಯನಂಥವರು ನಮ್ಮ ಸುತ್ತಮುತ್ತ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ತಮಗೆ ಮಹತ್ವದ್ದೆನಿಸಿದ್ದು ಉಳಿದವರಿಗೂ ಮಹತ್ವದ್ದೆನಿಸಬೇಕು ಎಂದು ಬಯಸುತ್ತಾರೆ. ಏನೋ ಸಾಧನೆ ಮಾಡಿರುತ್ತಾರೆ. ಯಾರೂ ಗುರುತಿಸಿಲ್ಲ ಎಂಬ ಕೊರಗಿರುತ್ತದೆ. ಯಾವುದೋ ಸಂದರ್ಭದಲ್ಲಿ ಅಸಾಂದರ್ಭಿಕವಾಗಿ ತಮ್ಮ ಸಾಹಸ ಹೇಳಿಕೊಂಡು ಈ ಅಳಿಯನಂತೆ ಅಪಹಾಸ್ಯಕ್ಕೆ ಈಡಾಗುತ್ತಾರೆ. ಆಗೆಲ್ಲ ಮುಂಡಾಸುವ ಮೂವತ್ತು ಮೊಳ ಎಂಬ ಮಾತು ಕಿವಿಗೆ ಬೀಳುತ್ತದೆ.