ಇಲ್ಲಿ,
ಕಾಲಕ್ಕೆ ಉಸಿರುಗಟ್ಟಿದೆ
ಅಪ್ರಸಿದ್ಧರೆಲ್ಲ ಕ್ಷಣದಲ್ಲಿ ಸಿದ್ಧಪ್ರಸಿದ್ಧರು
ಸ್ಥಳ ಮಹಿಮೆ. ದೇವ
ರಾಲ; ಇದರ ಆಳ ಲೆಕ್ಕಹಾಕಿ ನಿ
ರಾಳವಾಗಿ ಬದುಕುವುದು ಸಾಧ್ಯವಿಲ್ಲ
ರೂಪಾ, ನಿನ್ನ ರೂಪ ಅಪರೂಪ
ನಿನ್ನ ದೇವಿಯಾಗಿಸ ಹೊರಟವರಿಗೆ
ಅದೇ ನಿನ್ನ ‘ಅರ್ಹತೆ’ಯಾಗಿ ಕಂಡಿರಬೇಕು!
ನೀನು ಕನಸಿದ ಸೌಧಗಳೆಲ್ಲ ಇವರ
ಬುಲ್ಡೋಜರ್ಗೆ ಸಿಕ್ಕಿ ಪುಡಿ ಪುಡಿಯಾದಾಗ
ನೀ ನಕ್ಕೆ ಅಂದು ಕೊಂಡದ್ದು ನನ್ನ
ಭ್ರಮೆ ಇದ್ದಿರಬೇಕು
ಕನ್ವರ್, ಇದು ನಿನ್ನೊಬ್ಬಳ ಇಂದು ನಿನ್ನಿನ
ಕಣ್ಣೀರ ಕಥೆಯಲ್ಲ
ಶತಶತಮಾನಗಳ ಕಾಲ ಕೆಂಪು ಮಸಿಯಲ್ಲಿ
ಹರಿದು ಬಂದಿದೆ ಧಾರಾವಾಹಿ; ಸಶೇಷ
ನೆಲದ ಮೊಗ್ಗಿಗೆ ಮುಗಿಲ
ತಾರೆಯಾಗಿ ಅರಳುವ ಆಶೆ ಇಂದಿನದಲ್ಲ
ಬಡಪಾಯಿ ಧ್ರುವನಿಗೆ ನಿನ್ನ
ಸವಾಲಿನ ಅವಶ್ಯಕತೆ ಇತ್ತ್ತೆ?
ಅದು ನಿನಗೆ ಗೊತ್ತಿಲ್ಲದಿದ್ದರೂ ನಿನ್ನ
ಹೆಸರಿಗೆ ‘ಜೈ’ ಅಂದವರಿಗೆ ಚೆನ್ನಾಗಿ ಗೊತ್ತಿದೆ.
ರೂಪಾ, ಕೊನೆಗೂ ನೀ ದೇವಿಯಾದೆ
ಅಲ್ಲ, ಅಲ್ಲ;
ನಿನ್ನ ದೇವಿಯಾಗಿಸಿದರು
೧೩-೪-೮೮
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಹಿರಿಯ ಸುದ್ದಿ ಸಂಪಾದಕ, ಸಂಪಾದಕ, ಮುದ್ರಕ ಮತ್ತು ಪ್ರಕಾಶಕನಾಗಿ 2020ರ ಡಿಸೆಂಬರ್ ಕೊನೆಯ ದಿನ ವೃತ್ತಿಯಿಂದ ನಿವೃತ್ತನಾದೆ. ಪತ್ನಿ, ಮಗ, ಸೊಸೆ, ಮಗಳು, ಅಳಿಯ ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.