*ಹಿತ್ತಲ ಗಿಡ ಮದ್ದಲ್ಲ
ಮಗು ಕಂಕುಳಲ್ಲಿಯೇ ಇದೆ. ತನ್ನ ಮಗು ಕಳೆದುಹೋಯಿತು ಎಂದು ತಾಯಿಯೊಬ್ಬಳು ಊರಲ್ಲೆಲ್ಲ ಹುಡುಕಿದಳಂತೆ. ನಾವು ಹುಡುಕಾಡುತ್ತಿರುವ ವಸ್ತು ನಮಗೆ ಕೈಗೆಟಕುವಂತೆಯೇ ಇರುತ್ತದ. ಆದರೆ ಅದು ನಮ್ಮ ಅರಿವಿಗೆ ನಿಲುಕದೆ ಮರುಳರಂತೆ ಇರುತ್ತೇವೆ ನಾವು. ಇಂಥದ್ದನ್ನೆಲ್ಲ ಕಂಡಾಗ ಈ ಮೇಲಿನ ಮಾತನ್ನು ಹೇಳುವುದು ಸಾಮಾನ್ಯ.
ಹಣ ಹಣ ಎಂದು ನಾವು ಒದ್ದಾಡುತ್ತಿರುತ್ತೇವೆ. ಅದೆಷ್ಟೋ ಬಾರಿ ನಾವು ನೆಲದಲ್ಲಿರುವ ನಿಧಿಯ ಮೇಲೆಯೇ ಅಡ್ಡಾಡಿರುತ್ತೇವೆ. ಆದರೆ ನಾವು ತುಳಿದ ಜಾಗದಲ್ಲಿಯೇ ನಿಧಿ ಇದೆ ಎಂಬುದು ನಮ್ಮ ಅರಿವಿಗೆ ಬಂದಿರುವುದಿಲ್ಲ.
ಮನೆಯಲ್ಲಿ ಯಾರಿಗೋ ಅನಾರೋಗ್ಯವೆಂದು ವೈದ್ಯರಿಗಾಗಿ ಊರೆಲ್ಲ ಸುತ್ತುತ್ತೇವೆ. ಆದರೆ ಮನೆಯಲ್ಲಿಯೇ ಇರುವ ಅಜ್ಜಿ ಒಂದು ಕಷಾಯ ಮಾಡಿಕೊಟ್ಟರೆ ವೈದ್ಯರ ಅಗತ್ಯವೇ ಬರುವುದಿಲ್ಲ. ಅದನ್ನು ಅರಿಯಬೇಕಲ್ಲವೆ? ಹಿತ್ತಲಗಿಡ ಮದ್ದಲ್ಲ ಎಂಬ ಭಾವನೆಯನ್ನು ತೊಡೆಯಬೇಕು ಮೊದಲು.
ನಮ್ಮ ಎದುರಿಗೇ ಇರುವ ಪ್ರತಿಭೆಯನ್ನು ನಾವು ಗುರುತಿಸುವುದಿಲ್ಲ. ಆದರೆ ಆ ಪ್ರತಿಭೆ ಬೇರೆ ಕಡೆಗಳಲ್ಲಿ ಹೆಸರು ಮಾಡಿದಾಗ, ಅಯ್ಯೋ, ನಮ್ಮೆದುರಿಗಿದ್ದಾಗ ನಾವು ಗುರುತಿಸಲಿಲ್ಲವಲ್ಲ ಎಂದು ಹಳಹಳಿಸುತ್ತೇವೆ.
ಒಟ್ಟಾರೆ ಇದು ಹೇಳುವುದು ಇಷ್ಟೇ, ಪರಿಹಾರವೋ ಸಾಧನವೋ ಗುರಿಯೋ ಏನೇ ಇರಲಿ ಮೊದಲು ನಿಮ್ಮ ಸನಿಹದಲ್ಲೇ ಹುಡುಕಿ, ಅಲ್ಲಿಯೇ ಸಿಗಬಹುದು ನಿಮಗೆ. ಮನೆ ಗೆದ್ದು ಮಾರು ಗೆಲ್ಲು ಎಂಬ ಮಾತಿದೆಯಲ್ಲ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಹಿರಿಯ ಸುದ್ದಿ ಸಂಪಾದಕ, ಸಂಪಾದಕ, ಮುದ್ರಕ ಮತ್ತು ಪ್ರಕಾಶಕನಾಗಿ 2020ರ ಡಿಸೆಂಬರ್ ಕೊನೆಯ ದಿನ ವೃತ್ತಿಯಿಂದ ನಿವೃತ್ತನಾದೆ. ಪತ್ನಿ, ಮಗ, ಸೊಸೆ, ಮಗಳು, ಅಳಿಯ ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.