*ಬಲಿಗೆ ಆಯ್ಕೆ ಇರುವುದಿಲ್ಲ
ಕೋಳಿ ಕೇಳಿ ಮಸಾಲೆ ಅರೆಯುತ್ತಾರಾ ಎಂದೋ, ಕುರಿ ಕೇಳಿ ಮಸಾಲೆ ರುಬ್ಬುತ್ತಾರಾ ಎಂದೋ ಹೇಳುವುದನ್ನು ಹಲವು ಬಾರಿ ನಾವು ಕೇಳಿದ್ದೇವೆ. ಕೋಳಿ ತಿನ್ನುವವನು ಕೋಳಿಯ ಹತ್ತಿರ ಹೋಗಿ `ಇವತ್ತು ನಿನ್ನನ್ನು ಕೊಂದು ಸಾರು ಮಾಡಿ ತಿನ್ನುತ್ತೇನೆ, ಆಗಬಹುದೆ?’ ಎಂದು ಕೇಳಿದರೆ ಕೋಳಿ ಹೂಂ ಅನ್ನಬಹುದೆ? ಇದೇ ಮಾತು ಕುರಿಗೂ ಅನ್ವಯಿಸುತ್ತದೆ.
ಯಾವ ಕೋಳಿಯನ್ನು ಕತ್ತರಿಸಬೇಕು, ಹೇಗೆ ಕತ್ತರಿಸಬೇಕು, ಎಷ್ಟು ಕೋಳಿಗಳನ್ನು ಕತ್ತರಿಸಬೇಕು ಎಂದು ನಿರ್ಧರಿಸುವವನು ಕೋಳಿಯನ್ನು ತಿನ್ನುವವನೋ ಅಡುಗೆಯನ್ನು ಮಾಡುವವನೋ ಆಗಿರುತ್ತಾರೆ. ಕೋಳಿಯ ಅಭಿಪ್ರಾಯವನ್ನು ಕೇಳುತ್ತ ಕುಳಿತರೆ ಕೋಳಿಯನ್ನು ತಿಂದಹಾಗೆಯೇ.
ಅಡುಗೆಯವನ ನಿರ್ಧಾರ ಎಂದೂ ಕೋಳಿಗೆ ಪ್ರಿಯವಾಗಲಿಕ್ಕೆ ಸಾಧ್ಯವೇ ಇಲ್ಲ. ಅದೇ ರೀತಿ ನಾಯಕನ ಸ್ಥಾನದಲ್ಲಿ ಇದ್ದವನು ತನ್ನ ಅನುಯಾಯಿಗಳ ಬಳಿ ಹಾಗೆ ಮಾಡಲೆ ಹೀಗೆ ಮಾಡಲೇ ಎಂದು ಕೇಳುತ್ತ ಕುಳಿತರೆ ಒಮ್ಮತ ಮೂಡುವುದಂತೂ ದೂರವೇ ಉಳಿಯಿತು. ಕಾರ್ಯ ಆರಂಭವೇ ಆಗುವುದಿಲ್ಲ. ಪ್ರಿಯವೋ ಅಪ್ರಿಯವೋ ತನ್ನ ನಿರ್ಧಾರವನ್ನು ಆತ ನಿರ್ದಾಕ್ಷಿಣ್ಯವಾಗಿ ಹೇರಲೇ ಬೇಕು. ಹಾಗೆ ಹೇರಿದಾಗಲೇ ಆತನ ಉದ್ದೇಶಿತ ಕಾರ್ಯ ಸಿದ್ಧಿಸುತ್ತದೆ.
ಹಾಗೆಂದು ಅಭಿಪ್ರಾಯ ಪಡೆಯುವುದು ತಪ್ಪೆಂದಲ್ಲ. ಅಭಿಪ್ರಾಯ ಪಡೆದ ಬಳಿಕ ನಾಯಕ ತನ್ನದೇ ಒಂದು ನಿಲವು ರೂಪಿಸಿಕೊಂಡು ಅದನ್ನು ಜಾರಿಗೆ ತರುತ್ತಾನೆ, ಯಶಸ್ವಿಯಾಗುತ್ತಾನೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.