*ಈ ರಾಜ್ಯದಲ್ಲಿ ಸುಭಿಕ್ಷವೇ ಸುಭಿಕ್ಷ
ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯುತ್ತಾರೆ. ಸರ್ವಗುಣ ಸಂಪನ್ನನಾದ ಒಬ್ಬ ವ್ಯಕ್ತಿ ಪ್ರಸ್ತುತ ಕಾಲದಲ್ಲಿ ಯಾರು ಇದ್ದಾರೆ ಎಂದು ವಾಲ್ಮೀಕಿ ಮಹರ್ಷಿಯು ನಾರದ ಮುನಿಗಳನ್ನು ಪ್ರಶ್ನಿಸುತ್ತಾರಂತೆ. ಆಗ ನಾರದರು ವಾಲ್ಮೀಕಿಗೆ ಶ್ರೀರಾಮನ ಚರಿತ್ರೆಯನ್ನು ಹೇಳುತ್ತಾರಂತೆ.
ಶ್ರೀರಾಮನ ರಾಜ್ಯದಲ್ಲಿ ಯಾವುದೇ ರೀತಿಯ ಕುಂದುಕೊರತೆಗಳು ಇರಲಿಲ್ಲವಂತೆ. ಎಲ್ಲರೂ ಸುಖಿಗಳಾಗಿದ್ದರಂತೆ. ಶ್ರೀರಾಮ ಸ್ವತಃ ಪಿತೃವಾಕ್ಯ ಪರಿಪಾಲನೆಗಾಗಿ ಕಾಡಿಗೆ ತೆರಳಿದ್ದ. ಜನರ ಅಪವಾದಕ್ಕೆ ಅಂಜಿ ತನ್ನ ಪತ್ನಿ ಸೀತೆಯನ್ನು ತ್ಯಾಗ ಮಾಡಿದ್ದ.
ನ್ಯಾಯದಾನದಲ್ಲಿ ಶ್ರೀರಾಮನು ಅತ್ಯಂತ ಹೆಸರುವಾಸಿಯಾಗಿದ್ದ. ತನ್ನ ಕಾಲದ ರಾಜನೀತಿಯನ್ನು ಕರ್ತವ್ಯಪರನಾಗಿ ಜಾರಿಮಾಡಿ ಎಲ್ಲರಿಗೂ ಆದರ್ಶಪುರುಷನಾಗಿದ್ದ. ರಾಜನಾದವನು ಹೇಗೆ ಆಡಳಿತ ನಡೆಸಬೇಕೆಂದರೆ ಶ್ರೀರಾಮನಂತೆ ಎಂಬ ಮಾತು ಪ್ರಚಲಿತದಲ್ಲಿ ಬಂತು. ರಾಜರಿಗೆಲ್ಲ ಶ್ರೀರಾಮನ ರಾಜ್ಯವೇ ಮಾದರಿಯಾಯಿತು.
ಇಂದು ರಾಜರಿಲ್ಲ. ಪ್ರಜೆಗಳೇ ಪ್ರಭುಗಳು. ಇಂಥ ವ್ಯವಸ್ಥೆಯಲ್ಲೂ ಉತ್ತಮ ಆಡಳಿತವನ್ನು ಕಂಡಾಗ ಅದೊಂದು ರಾಮರಾಜ್ಯ ಎಂದು ವರ್ಣಿಸುವುದಿದೆ.
ಯಾವ ರಾಜ್ಯದಲ್ಲಿ ಸುಭಿಕ್ಷ ಇಲ್ಲವೋ, ಪ್ರಜೆಗಳು ಅಸುಖಿಗಳಾಗಿದ್ದಾರೋ, ಪ್ರಭುವಿನ ವಿರುದ್ಧ ಯಾವ ರಾಜ್ಯದಲ್ಲಿ ಪ್ರಜೆಗಳು ಗೊಣಗುತ್ತಾರೋ ಅಂಥ ರಾಜ್ಯವನ್ನು ರಾವಣ ರಾಜ್ಯ ಎಂದು ಕರೆಯುವುದಿದೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಹಿರಿಯ ಸುದ್ದಿ ಸಂಪಾದಕ, ಸಂಪಾದಕ, ಮುದ್ರಕ ಮತ್ತು ಪ್ರಕಾಶಕನಾಗಿ 2020ರ ಡಿಸೆಂಬರ್ ಕೊನೆಯ ದಿನ ವೃತ್ತಿಯಿಂದ ನಿವೃತ್ತನಾದೆ. ಪತ್ನಿ, ಮಗ, ಸೊಸೆ, ಮಗಳು, ಅಳಿಯ ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.