*ಗುರಿ ತಲುಪದ ಅತಂತ್ರ ಸ್ಥಿತಿ
ಅಲ್ಲಿಯೂ ಸಲ್ಲದ ಇಲ್ಲಿಯೂ ಸಲ್ಲದ ಸ್ಥಿತಿಯನ್ನು ಅನುಭವಿಸುವವರಿಗೆ ತ್ರಿಶಂಕು ಎಂದು ಹೇಳುತ್ತಾರೆ. ತ್ರಿಶಂಕು ಸ್ವರ್ಗವಾಯಿತು ಅವನ ಸ್ಥಿತಿ ಎಂದು ಹಾಸ್ಯ ಮಾಡುತ್ತಾರೆ ಇಲ್ಲವೇ ಮರುಕ ಪಡುತ್ತಾರೆ.
ಏನಿದು ತ್ರಿಶಂಕು? ಮೂರು ಪಾಪಗಳೇ ತ್ರಿಶಂಕು. ಇದನ್ನು ಮಾಡಿದವನೇ ತ್ರಿಶಂಕು. ಪುರಾಣ ಪ್ರಸಿದ್ಧ ತ್ರಿಶಂಕು ಮಹಾರಾಜನ ಕತೆ ಯಾರಿಗೆ ಗೊತ್ತಿಲ್ಲ? ಈ ಮಹಾತ್ಮನ ತಂದೆ ಸತ್ಯವ್ರತನೇ ತ್ರಿಶಂಕು.
ಈತ ತನ್ನ ಯವ್ವನದಲ್ಲಿ ವಿವಾಹಿತ ಸ್ತ್ರೀಯೊಬ್ಬಳನ್ನು ಮೋಹಿಸಿ ಆಕೆಯ ಅಪಹರಣ ಮಾಡಿದ್ದ. ಇದರಿಂದ ಆತನ ತಂದೆ ಕೋಪಗೊಂಡು ನಾಯಿಯ ಮಾಂಸವನ್ನು ತಿನ್ನುವವರ ಕೇರಿಯಲ್ಲಿ ಹೋಗಿ ವಾಸಿಸು ಎಂದು ಶಾಪವನ್ನು ಕೊಟ್ಟಿದ್ದ. ಈತ ಊರ ಹೊರಗೆ ವಾಸಿಸುತ್ತಿದ್ದ ಕಾಲದಲ್ಲಿ ಹನ್ನರಡು ವರ್ಷಗಳ ಕ್ಷಾಮ ಬಂತು. ಜನರು ಹಸಿವಿನಿಂದ ಸಾಯುತ್ತಿದ್ದರು. ತಪಸ್ಸಿಗೆ ತೆರಳಿದ್ದ ವಿಶ್ವಾಮಿತ್ರ ಮುನಿಯ ಕುಟುಂಬವನ್ನು ಪೋಷಿಸುವ ಹೊಣೆಯನ್ನು ಸತ್ಯವ್ರತ ವಹಿಸಿಕೊಂಡ. ಎಲ್ಲಿಯೂ ಆಹಾರ ಸಿಗದೆ ಹೋದಾಗ ಒಂದು ದಿನ ಈತ ತನ್ನ ಗುರು ವಶಿಷ್ಠನ ಗೋವನ್ನೇ ಕೊಂದು ಅದನ್ನು ಶುದ್ಧಗೊಳಿಸದೆಯೇ ತಾನೂ ತಿಂದು ವಿಶ್ವಾಮಿತ್ರನ ಕುಟುಂಬದವರಿಗೂ ತಿನ್ನಿಸುತ್ತಾನೆ.
ಇದರಿಂದ ವಶಿಷ್ಠರಿಗೆ ಕೋಪ ಬರುತ್ತದೆ. ತಂದೆಗೆ ದುಃಖವನ್ನು ಉಂಟುಮಾಡಿದ್ದೀಯಾ, ಪರಸ್ತ್ರೀಯನ್ನು ಮೋಹಿಸಿದ್ದೀಯಾ, ಗೋಹತ್ಯೆಯನ್ನು ಮಾಡಿದ್ದೀಯಾ. ಈ ಮೂರು ಪಾಪಗಳಿಂದಾಗಿ ನೀನು ತ್ರಿಶಂಕು ಎಂದು ವಶಿಷ್ಠರು ಕರೆದರು.
ತಪಸ್ಸಿನಿಂದ ಮರಳಿದ ವಿಶ್ವಾಮಿತ್ರರು ತಮ್ಮ ಕುಟುಂಬಕ್ಕೆ ತ್ರಿಶಂಕು ನೆರವಾಗಿದ್ದನ್ನು ಕಂಡು ಸಂತೋಷಪಟ್ಟು ಆತನನ್ನು ಊರಿಗೆ ಕರೆತಂದು ಪಟ್ಟಾಭಿಷೇಕ ಮಾಡಿದರು. ವರ್ಷಗಳು ಉರುಳಿದವು. ತ್ರಿಶಂಕು ಮಹಾರಾಜನಿಗೆ ಸಶರೀರಿಯಾಗಿ ಸ್ವರ್ಗಕ್ಕೆ ಹೋಗಬೇಕು ಎಂಬ ಬಯಕೆಯಾಗಿ ಅದನ್ನು ಈಡೇರಿಸಲು ಯಾಗ ಮಾಡುವಂತೆ ವಶಿಷ್ಠರನ್ನು ಕೋರುತ್ತಾನೆ. ಆದರೆ ವಶಿಷ್ಠರು ನಿರಾಕರಿಸುತ್ತಾರೆ. ವಿಶ್ವಾಮಿತ್ರರು ಅದನ್ನು ಒಪ್ಪಿಕೊಂಡು ಯಾಗವನ್ನು ಆರಂಭಿಸಿ ತ್ರಿಶಂಕುವನ್ನು ಸ್ವರ್ಗಕ್ಕೆ ಕಳುಹಿಸುತ್ತಾರೆ. ಆದರೆ ಇಂದ್ರನು ಇದನ್ನು ಒಪ್ಪದೆ ತ್ರಿಶಂಕುವನ್ನು ಕೆಳಕ್ಕೆ ತಳ್ಳುತ್ತಾನೆ. ಆಗ ವಿಶ್ವಾಮಿತ್ರರು ಆತನನ್ನು ಅರ್ಧದಲ್ಲಿಯೇ ತಡೆದು ಪ್ರತಿಸ್ವರ್ಗವನ್ನೇ ತ್ರಿಶಂಕುವಿಗಾಗಿ ನಿರ್ಮಿಸಿಕೊಡುತ್ತಾರೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಹಿರಿಯ ಸುದ್ದಿ ಸಂಪಾದಕ, ಸಂಪಾದಕ, ಮುದ್ರಕ ಮತ್ತು ಪ್ರಕಾಶಕನಾಗಿ 2020ರ ಡಿಸೆಂಬರ್ ಕೊನೆಯ ದಿನ ವೃತ್ತಿಯಿಂದ ನಿವೃತ್ತನಾದೆ. ಪತ್ನಿ, ಮಗ, ಸೊಸೆ, ಮಗಳು, ಅಳಿಯ ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.