*ಅಖಂಡ ಪ್ರೇಮಿಗಳ ಪ್ರತೀಕ ಇವರು
ಪ್ರೇಮ ಒಂದು ವಿಚಿತ್ರ ರೋಗ. ಈ ರೋಗ ಹತ್ತಿತು ಎಂದರೆ ವಾಸಿಯಾಗುವುದಕ್ಕೆ ಹಲವು ವರ್ಷಗಳೇ ಬೇಕು. ಈ ರೋಗ ತೀವ್ರವಾಗಿ ಸತ್ತವರೂ ಇದ್ದಾರೆ.
ಪ್ರೇಮಜ್ವರ ತೀವ್ರವಾಗಿ ಜೀವ ಕೊಟ್ಟ ಪಾತ್ರಗಳಲ್ಲಿ ಲೈಲಾ ಮತ್ತು ಮಜ್ನು ಜಗದ್ವಿಖ್ಯಾತರು. ಇವರು ಇತಿಹಾಸ ಪುರುಷರೇನಲ್ಲ. ಹಾಶ್ಮೀತ್ ಶಾ ಎನ್ನುವವರು ಬರೆದ ಕತೆಯ ಪಾತ್ರಗಳು ಈ ಲೈಲಾ ಮಜ್ನು. ಮಜ್ನು ನಾಜಿದ್ನ ದೊರೆ ಓಮರ್ನ ಮಗ. ಆತನನ್ನು ಆರನೆ ವರ್ಷಕ್ಕೆ ಒಂದು ಶಾಲೆಗೆ ಸೇರಿಸುತ್ತಾರೆ. ಅಲ್ಲಿ ಆತ ಲೈಲಾ ಎಂಬ ಹುಡುಗಿಯ ಪ್ರೀತಿಗೆ ಸಿಲುಕುತ್ತಾನೆ. ಅವಳ ಮರುಳುಗೊಳಿಸುವ ಕಪ್ಪು ಕಣ್ಣುಗಳು ಅವನಿಗೆ ಮೋಡಿ ಮಾಡುತ್ತವೆ.
ಶಾಲೆಯಲ್ಲಿಯೇ ಮಜ್ನು ತನ್ನ ಗುರುಗಳ ಮುಂದೆ ಲೈಲಾ ನನ್ನ ಕಾಬಾ ಎಂದು ಘೋಷಿಸುತ್ತಾನೆ. ಲೈಲಾಳ ತಾಯಿ ಅವಳನ್ನು ನಾಚಿಕೆಯಿಲ್ಲದವಳು ಎಂದು ಜರೆಯುತ್ತಾಳೆ. ವರ್ಷಗಳು ಉರುಳಿದಂತೆ ಲೈಲಾನ ಪ್ರೇಮಪಾಶ ಮಜ್ನುವನ್ನು ಇನ್ನಷ್ಟು ತೀವ್ರವಾಗಿ ಬಂಧಿಸುತ್ತದೆ. ಆತ ಲೈಲಾನ ಮನೆಗೆ ಹೋದಾಗ ಆಕೆಯ ತಂದೆ ಅಬ್ದುಲ್ಲಾ ಆತನಿಗೆ ಚೆನ್ನಾಗಿ ಹೊಡೆಯುತ್ತಾನೆ. ಮಜ್ನು ಹುಚ್ಚನಾಗಿ ಕಾಡುಮೇಡುಗಳಲ್ಲಿ ಅಲೆಯುತ್ತಾನೆ. ಲೈಲಾನ ಹೆತ್ತವರು ಆಕೆಯನ್ನು ಅರೇಬಿಯಾದ ಒಬ್ಬ ಯುವರಾಜನಿಗೆ ಮದುವೆಮಾಡಿ ಕೊಡುತ್ತಾರೆ.
ಪ್ರೇಮಿಯಿಂದ ಅಗಲಿದ ದುಃಖ ಸಹಿಸಲಾಗದೆ ಲೈಲಾ ಅನ್ನ ನೀರು ಬಿಟ್ಟು ಸಾಯುತ್ತಾಳೆ. ಈ ಸುದ್ದಿ ಕೇಳಿದ ಮಜ್ನು ಧಾವಿಸಿ ಬರುತ್ತಾನೆ. ಆಕೆಯ ಸಮಾಧಿಯ ಮೇಲೆ ಬಿದ್ದು ಸಾಯುತ್ತಾನೆ.
ಇಂಥ ಅಮರ ಪ್ರೇಮಿಗಳು ಇನ್ನೂ ಇದ್ದಾರೆ. ರೋಮಿಯೋ – ಜೂಲಿಯಟ್, ದೇವದಾಸ – ಪಾರ್ವತಿ, ಅನಾರ್ಕಲಿ – ಸಲೀಂ. ನಾವು ನೀವು ಕಂಡು ಕೇಳಿರುವ ಇನ್ನೂ ಅನೇಕರಿದ್ದಾರೆ. ತೀವ್ರ ಪ್ರೇಮದಲ್ಲಿ ಬಿದ್ದವರನ್ನು ಕಂಡಾಗ ಮೊದಲಿಗೆ ನಮ್ಮ ಬಾಯಿಂದ ಬರುವುದು, ನೋಡೋ ಅವರನ್ನ, ಒಳ್ಳೆ ಲೈಲಾ ಮಜ್ನು ಥರ ಮಾಡ್ತಾರೆ ಎಂಬ ಮಾತು.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಹಿರಿಯ ಸುದ್ದಿ ಸಂಪಾದಕ, ಸಂಪಾದಕ, ಮುದ್ರಕ ಮತ್ತು ಪ್ರಕಾಶಕನಾಗಿ 2020ರ ಡಿಸೆಂಬರ್ ಕೊನೆಯ ದಿನ ವೃತ್ತಿಯಿಂದ ನಿವೃತ್ತನಾದೆ. ಪತ್ನಿ, ಮಗ, ಸೊಸೆ, ಮಗಳು, ಅಳಿಯ ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.