*ವಿಷಯಕ್ಕಿಂತ ಪೀಠಿಕೆಯೇ ಉದ್ದವಾಗಿರುತ್ತದೆ
ಮೈಲಾರಕ್ಕೆ ಹೋಗುವುದಕ್ಕೆ ನೇರವಾದ ಹತ್ತಿರದ ದಾರಿಯಿದೆ. ಆದರೆ ನಮ್ಮೂರ ಗಣೇಶ ಯಾವತ್ತೂ ಆ ಹತ್ತಿರದ ದಾರಿಯಿಂದ ಹೋದವನೇ ಅಲ್ಲ. ದೂರದ ಕೊಂಕಣವನ್ನು ಸುತ್ತಿಯೇ ಮೈಲಾರಕ್ಕೆ ಹೋಗುವುದು ಅವನು ರೂಢಿ.
ಗಣೇಶನಂಥವರು ಎಲ್ಲ ಕಡೆಯೂ ನಮಗೆ ಎದುರಾಗುತ್ತಾರೆ, ಬಸ್ಸಿನಲ್ಲಿ, ಕಛೇರಿಯಲ್ಲಿ, ಮಾರುಕಟ್ಟೆಯಲ್ಲಿ ಎಲ್ಲೆಂದರೆ ಅಲ್ಲಿ. ಹೇಳುವುದನ್ನು ನೇರವಾಗಿ ಹೇಳದೆ ಸುತ್ತಿ ಬಳಸಿ ಹೇಳುತ್ತಾರೆ ಇವರು. ವಿಷಯಕ್ಕಿಂತ ಪೀಠಿಕೆಯೇ ಉದ್ದವಾಗಿರುತ್ತದೆ. ಕೆಲವರ ಬರೆವಣಿಗೆಯೂ ಹಾಗೆಯೇ ಇರುತ್ತದೆ. ಹೇಳಬೇಕಾಗಿರುವುದನ್ನು ಒಂದೇ ವಾಕ್ಯದಲ್ಲಿ ಹೇಳಿ ಮುಗಿಸಿಬಿಡಬಹುದು. ಆದರೆ ಅದಕ್ಕೆ ಪೀಠಿಕೆಯಾಗಿ ಐವತ್ತು ಮಾತು ಅನಗತ್ಯವಾಗಿ ಹೇಳಿರುತ್ತಾರೆ. ಇಂಥವರನ್ನು ಕಂಡಾಗಲೆಲ್ಲ `ಕೊಂಕಣ ಸುತ್ತಿ ಮೈಲಾರಕ್ಕೆ ಬಂದ’ ಎಂದು ಟೀಕಿಸುತ್ತಾರೆ.
ಹೇಳುವುದನ್ನು ಸ್ಪಷ್ಟವಾಗಿ ನೇರವಾಗಿ ಸಂವಹನಗೊಳಿಸುವುದೂ ಒಂದು ಕಲೆ. ಅದು ಎಲ್ಲರಿಗೂ ಸಿದ್ಧಿಸುವುದಿಲ್ಲ. ಮಾತಿನಲ್ಲಾಗಲೀ ಬರೆಹದಲ್ಲಾಗಲೀ ಅದನ್ನು ಸಿದ್ಧಿಸಿಕೊಂಡರೆ ಆತ ಯಶಸ್ವಿ ವ್ಯಕ್ತಿ. ಅದಕ್ಕಾಗಿಯೇ ಮಾತು ಮುತ್ತು, ಮಾತು ಮಾಣಿಕ್ಯ, ಮಾತೆಂಬುದು ಜ್ಯೋತಿರ್ಲಿಂಗ ಎಂಬ ಮಾತು ಚಲಾವಣೆಗೆ ಬಂದುದು.
ಸುತ್ತಿ ಬಳಸಿ ಮಾತನಾಡುವುದು ಕೆಲವರ ಸ್ವಭಾವ ಇರಬಹುದು. ಇಲ್ಲವೆ ದಾರಿ ತಪ್ಪಿಸುವ ಉದ್ದೇಶಪೂರ್ವಕ ಕ್ರಿಯೆಯೂ ಇರಬಹುದು. ಆದರೆ ಇದು ಕೇಳುವವರ, ಓದುವವರ ಸಹನೆಯನ್ನು ಪರೀಕ್ಷಿಸುತ್ತದೆ. ವಿಷಯ ಇಲ್ಲದೆಯೂ ತಾಸು ತಾಸು ಕಾಲ ಮಾತನಾಡುವವರು ಇರುತ್ತಾರಲ್ಲ, ಇವರು ಕೊಂಕಣದಲ್ಲಿಯೇ ಸುತ್ತಾಡುತ್ತಿರುತ್ತಾರೆ. ಮೈಲಾರ ತಲುಪುವುದೇ ಇಲ್ಲ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಹಿರಿಯ ಸುದ್ದಿ ಸಂಪಾದಕ, ಸಂಪಾದಕ, ಮುದ್ರಕ ಮತ್ತು ಪ್ರಕಾಶಕನಾಗಿ 2020ರ ಡಿಸೆಂಬರ್ ಕೊನೆಯ ದಿನ ವೃತ್ತಿಯಿಂದ ನಿವೃತ್ತನಾದೆ. ಪತ್ನಿ, ಮಗ, ಸೊಸೆ, ಮಗಳು, ಅಳಿಯ ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.