*ಸೇವೆಯಲ್ಲಿ ಪಾಲ್ಗೊಳ್ಳಬೇಕೆಂಬ ಮನೋಭಾವ ಮುಖ್ಯ

ಳಿಲು ಯಾರಿಗೆ ಗೊತ್ತಿಲ್ಲ ಹೇಳಿ? ಪುಟ್ಟದಾದ ಮುದ್ದುಮುದ್ದಾಗಿರುವ ಪ್ರಾಣಿ. ಈ ಪುಟ್ಟ ಪ್ರಾಣಿಯು ಏನಾದರೂ ಸೇವೆ ಮಾಡುವುದು ಸಾಧ್ಯವೆ?
ಯಾರಾದರೂ ದೊಡ್ಡ ಕಾರ್ಯ ನಡೆಯುತ್ತಿರುವಲ್ಲಿ ಹೋಗಿ ಏನಾದರೂ ಚಿಕ್ಕಪುಟ್ಟ ಕೆಲಸ ಮಾಡಿಕೊಟ್ಟು ತಮ್ಮ ಅಳಿಲು ಸೇವೆ ಸಂದಿತು ಎಂದು ಸಮಾಧಾನಪಟ್ಟುಕೊಳ್ಳುವುದು ಇದೆ. `ನಿಮ್ಮದೂ ನಡೆಯಲಿ ಅಳಿಲು ಸೇವೆ’ ಎಂದು ಕರೆ ಕೊಡುವುದನ್ನು ಕೇಳಿದ್ದೇವೆ. ಏನಿದು ಅಳಿಲು ಸೇವೆ ಎಂದು ಕೇಳಿದರೆ ಹಲವರಿಗೆ ಅದು ಗೊತ್ತಿರುವುದಿಲ್ಲ.
ರಾಮಾಯಣ ಗೊತ್ತಲ್ಲವೆ? ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗಿದ್ದು, ಹನುಮಂತ ಸೀತೆಯನ್ನು ಹುಡುಕಿದ್ದು, ಕಪಿಸೇನೆಯನ್ನು ಕೊಂಡೊಯ್ದದ್ದು ಎಲ್ಲ ಗೊತ್ತಿದೆ. ಲಂಕೆಗೆ ಹೋಗುವುದಕ್ಕೆ ಸಮುದ್ರದ ಅಡ್ಡಿ. ಈ ಅಡ್ಡಿಯನ್ನು ದಾಟಲು ಶ್ರೀರಾಮ ಕಪಿಸೇನೆಗೆ ಸಮುದ್ರಕ್ಕೆ ಸೇತುವೆಯನ್ನು ಕಟ್ಟಲು ಹೇಳುತ್ತಾನೆ. ಕಪಿಗಳು, ಕರಡಿಗಳು ದೊಡ್ಡ ದೊಡ್ಡ ಕಲ್ಲು ಬಂಡೆ ಮರಗಳನ್ನೆಲ್ಲ ತಂದು ಸೇತುವೆಯ ಕೆಲಸ ಭರದಿಂದ ನಡೆಯುವಂತೆ ಮಾಡಿದರು. ಆ ಗದ್ದಲದಲ್ಲಿ ಚಿಕ್ಕ ಅಳಿಲು ಸಣ್ಣ ಸಣ್ಣ ಕಲ್ಲುಗಳನ್ನು ತಾನೂ ಹೊತ್ತು ತರುತ್ತಿತ್ತು.
ಇದು ಶ್ರೀರಾಮನ ಗಮನ ಸೆಳೆಯಿತು. ಶ್ರೀರಾಮ ಪ್ರೀತಿಯಿಂದ ಅಳಿಲನ್ನು ಮಾತನಾಡಿಸಿದ. ಸ್ವಾಮಿ ನಿಮ್ಮ ಈ ಮಹಾನ್‌ ಕಾರ್ಯದಲ್ಲಿ ನನ್ನದೂ ಅಲ್ಪ ಸೇವೆ ಸಲ್ಲಲಿ ಎಂದು ಅಳಿಲು ಹೇಳಿತು. ಶ್ರೀರಾಮ ಆಶೀರ್ವಾದ ರೂಪದಲ್ಲಿ ತನ್ನ ಬಾಣದಿಂದ ಅಳಿಲಿನ ಬೆನ್ನ ಮೇಲೆ ಮೂರು ಗೆರೆಗಳನ್ನು ಎಳೆದನಂತೆ. ಅದು ಅಳಿಲು ಸಂತತಿಗೆಲ್ಲ ಬಂದಿದೆಯಂತೆ.
ಸಾವಿರ ಅಳಿಲುಗಳ ಸಣ್ಣಸಣ್ಣ ಸೇವೆಗಳು ಒಟ್ಟುಗೂಡಿದರೆ ಒಂದು ಆನೆಯ ಸೇವೆಯೂ ಆಗಬಹುದಲ್ಲವೆ? ಸೇವೆಯಿಂದಾಗುವ ಪರಿಣಾಮಕ್ಕಿಂತ ಅದರಲ್ಲಿ ಪಾಲ್ಗೊಳ್ಳಬೇಕೆಂಬ ಮನೋಭಾವ ಇದೆಯಲ್ಲ, ಅದು ಮುಖ್ಯ.